27 September 2011

ಬಯಲಾಟದ ಭಾಗವತಿಕೆಯ ಸ್ವರವಿನ್ಯಾಸದ ಬಡತನ!

ವೀಕಿಪೀಡಿಯಾಕ್ಕೆ ನಾನು ಯಕ್ಷಗಾನದ ರಾಗಗಳ ಬಗ್ಗೆ ಒಂದು ಲೇಖನ ಸೇರಿಸಿದಾಗ ಯಾರೋ ಸಂಗೀತದ ಮೇಲೆ ಒಲವಿದ್ದವರು ಬಂದು ಭಾಗವತಿಕೆಯಲ್ಲಿ ಸ್ವರವಿನ್ಯಾಸ ಬಹಳ ಬಡವಾಗಿದೆ, ರಾಗಗಳಲ್ಲಿ ವಿಸ್ತಾರವಿಲ್ಲ ಎಂದು ಅರ್ಥಬರುವಂತೆ ಬರೆದು ಸೇರಿಸಿದರು. ಶಬರಿಮಲೆಯಲ್ಲಿ ಬರೀ ಹದಿನೆಂಟೇ ಮೆಟ್ಟಿಲು, ನಮ್ಮ ಚಂದ್ರಗುತ್ತಿಯಲ್ಲಿ ೩೦೧!  ಇದನ್ನು ಗಮನಿಸಿದಾಗ, ಭಾಗವತಿಕೆಯಬಗ್ಗೆ ನನಗೆ ಅನ್ನಿಸಿದ್ದನ್ನು ಹೇಳಿಕೊಳ್ಳಬೇಕು ಎನಿಸಿ ಇಲ್ಲಿ ಬರೆಯುತ್ತಿದ್ದೇನೆ.

ಯಕ್ಷಗಾನ ಬಯಲಾಟ ಎಲ್ಲಾ ರೀತಿಯಲ್ಲಿ ಸರಳವಾಗಿದ್ದು ಜನರಿಗೆ ಹತ್ತಿರ ಇರಬೇಕು ಎನ್ನುವುದೇ ಅದರ ಉದ್ದೇಶವಿದ್ದಂತೆ ತೋರುತ್ತದೆ. ಬಯಲಾಟ ಸರಳವಲ್ಲ! ಆದರೆ ಬಯಲಾಟದ ಅಂಗಗಳು ಸರಳ ಇದರಲ್ಲಿ ಅನೇಕ ರೀತಿಯಲ್ಲಿ ಜನಸಾಮಾನ್ಯರೂ ಭಾಗವಹಿಸಬಹುದು. ಪರದೆ ಹಿಡಿಯಬಹುದು. ದೊಂದಿ ಹಿಡಿಯಬಹುದು, ಅಥವಾ ವೇಷಧಾರಿಯಾಗಬಹುದು. ಹಿಮ್ಮೇಳದಲ್ಲಿ ಭಾಗವಹಿಸುವುದು ಅಷ್ಟು ಸರಳವಲ್ಲದಿದ್ದರೂ ಕಷ್ಟವೇನಲ್ಲ. ಅಲ್ಲದೇ ವೇಷಕಟ್ಟುವುದು, ವೇಷತಯಾರಿಸುವುದು ಯಜಮಾನಿಕೆ ಹೀಗೆ ಬೇರೆ ರೀತಿಯಲ್ಲೂ ಭಾಗವಹಿಸಬಹುದು.  ಈ ಎಲ್ಲಾ ಸರಳ ಅಂಗಗಳನ್ನು ಸೇರಿಸಿ ಒಂದು ಸಂಕೀರ್ಣವಾದ ಕಲೆ ಯಕ್ಷಗಾನ ಬಯಲಾಟ ಸಿದ್ಧವಾಗುತ್ತದೆ. ಹಾಗೇ ಬಯಲಾಟದಲ್ಲಿ ಇರುವುದು ಬರಿ ಭಾಗವತಿಕೆಯೊಂದೇ ಅಲ್ಲ. ಅರ್ಥ, ಕುಣಿತ, ಅಭಿನಯ ಎಲ್ಲ ಇದೆ. ಇವೆಲ್ಲವೂ ಇರುವುದರಿಂದ ಕೇವಲ ಒಂದನ್ನೆ ದೊಡ್ಡದು ಮಾಡಿದರೆ ಅಭಾಸವಾಗುತ್ತದೆ. ಈ ಹಿನ್ನೆಲೆಯಲ್ಲಿ ಬಯಲಾಟದ ಭಾಗವತಿಕೆಯನ್ನು ಗಮನಿಸಬೇಕು.

ಬಯಲಾಟದಲ್ಲಿ ಅತಿ ಮೇಲಿನ ಶ್ರುತಿಯಲ್ಲಿ ಹಾಡುವುದರಿಂದ ಮತ್ತು ತಾರ ಸ್ಥಾಯಿಯ ಬಳಕೆ ಹೆಚ್ಚಾದ್ದರಿಂದಲೂ ಹೆಚ್ಚಿನ ಭಾಗವತರಿಗೆ ಸ್ವರ ವಿಸ್ತಾರಮಾಡುವುದು ಅಸಾಧ್ಯವೇ ಅಗಿಬಿಡಬಹುದು. ನೆಬ್ಬೂರರು, ನಾವುಡರಂತ ಕಂಠವುಳ್ಳವರು ಸ್ವಲ್ಪ ಹೆಚ್ಚು ವಿಸ್ತಾರಮಾಡಲು ಸಾಧ್ಯ (ಅವರವರ ಪ್ರತಿಭೆಯ ಮಿತಿಯಲ್ಲಿ). ಭಾಗವತರಿಗೆ ಸ್ವರಾಭ್ಯಾಸ ಕಡಿಮೆ ಎಂಬುದನ್ನು ಒಪ್ಪಿಕೊಂಡಮೇಲೂ, ಮೇಲಿನ ಶ್ರುತಿಯಲ್ಲಿ ಹಾಡಲೇಬೇಕಾದ ಮಿತಿಯ ಕಾರಣದಿಂದಲೇ ಎನೋ ಒಂದು ಹೊಸಬಗೆಯ ಸೌಂದರ್ಯ ಸೃಷ್ಟಿಯಾಗುತ್ತದೆ ಎಂಬುದನ್ನು ಗಮನಿಸಬೇಕು.  ಇದರಿಂದ ಉಂಟಾಗುವ ಸರಳತೆಯೋ ಏನೋ ಜನರಿಗೆ ಇಷ್ಟವಾಗುವುದು. ಈ ಸ್ವರಸಂಚಲನೆ ಬುದ್ಧಿಪೂರ್ವಕವಾಗಿ ಮಾಡುವುದು ಕಷ್ಟ ಅನ್ನಿಸುತ್ತದೆ. ಇಲ್ಲದಿದ್ದಲ್ಲಿ ಯಕ್ಷಗಾನದ ಶೈಲಿಯ ಸ್ವರಸಂಚಲನೆ ಬೇರೆ ಸಂಗೀತದ ಪ್ರಕಾರಗಳಲ್ಲಿ ಬಹಳವಾಗಿ ಕಾಣಸಿಗಬೇಕಿತ್ತು. ಹಾಗಿಲ್ಲದ್ದರಿಂದ, ತಾರ ಶ್ರುತಿ ಹಾಡುಗರ ಮೇಲೆ ಹಾಕುವ ಮಿತಿ ಒಂದು ವಿಶಿಷ್ಟ ಸ್ವರಸಂಚಲನೆಗೆ ದಾರಿ ಮಾಡಿಕೊಡುತ್ತದೆ ಎಂದು ವಾದಿಸಬಹುದು. ಧಾಟಿ ಸರಳವಾಗಿ ಕಾಣುವುದರಿಂದ ತಾಂತ್ರಿಕವಾಗಿ ಇದರ ಬೆಲೆ ಕಡಿಮೆ ಎನ್ನುವವರಿಗೆ ಒಂದು ಸವಾಲು. ಕಡಿಮೆ ಸ್ವರವಿನ್ಯಾಸಮಾಡಿ ಬಯಲಾಟದ ಭಾಗವತರಷ್ಟು ಸುಂದರವಾಗಿ ಹಾಡಿತೋರಿಸಿ ನೋಡುವ? ಮಿತಿಯಲ್ಲೇ ತಮ್ಮದೇ ಆದ ಗಮಕಗಳು (ಸ್ವರಮಾಲೆ), ಧ್ವನಿ ವ್ಯತ್ಯಾಸ ಇತ್ಯಾದಿಗಳ ಬೆಳವಣಿಗೆ ಆಗಿದೆ. ಈ ತಾರ ಶ್ರುತಿಯಲ್ಲಿ ಹಾಡುವ ಮಿತಿ ಇಲ್ಲದ್ದರಿಂದಲೋ ಏನೋ ಬೇರೆ ಸಂಗೀತದ ಪ್ರಕಾರಗಳಲ್ಲಿ ಬಯಲಾಟದ ಕೆಲವು ಧಾಟಿಗಳು ಮತ್ತು ಸ್ವರಮಾಲೆಗಳ ಬಳಕೆ ಇಲ್ಲ. ಹಾಗಾಗಿ ಯಕ್ಷಗಾನ ಕಡಿಮೆ ಸಂಗೀತ ಹೆಚ್ಚು ಎನ್ನುವುದು ಸರಿಯಲ್ಲ (*ಬೇರೆ ಮಿತಿ ಬೇರೆ ಮತಿ ಕೊಂಕುತಿಮ್ಮ ಎನ್ನಬಹುದು!).

 ಇನ್ನು ಭಾಗವತಿಕೆಯಲ್ಲಿ ಇಲ್ಲದ್ದನ್ನು ಸಂಗೀತದಲ್ಲಿ ಇರುವುದನ್ನು ಎತ್ತಿ ತೋರಿಸುವುದು ಸಾಮಾನ್ಯವಾದ್ದರಿಂದ ಸಂಗೀತಗಳಲ್ಲಿ ಇಲ್ಲದನ್ನು ಒಮ್ಮೆ ಗಮನಿಸೋಣ. ಬಯಲಾಟದ ಪದ ಕುಣಿತಕ್ಕೆಂದೇ ಬರೆದಿದ್ದು. ಹಾಗಾಗಿ ಅದರಲ್ಲಿ ತಾಳದ ಲಯವಲ್ಲದೇ ಇನ್ನೂ ಸೂಕ್ಷ್ಮವಾದ ಛಂದೋಲಯಗಳಿವೆ. ಅಂದರೆ ಒಂದೇ ತಾಳದಲ್ಲಿರುವ ಬೇರೆಬೇರೆ ಪದ್ಯಗಳಲ್ಲಿ ಕುಣಿತ ಬೇರೆಬೇರೆ ರೀತಿಬರುವಂತೆ ಪದ ರಚನೆ ಇರುತ್ತದೆ. ಈ ವೈವಿಧ್ಯಕ್ಕೆ ತಾಳದ ಮಟ್ಟುಗಳು ಎನ್ನುವುದಾಗಿ ಹೆಸರು. ಈ ಮಟ್ಟುಗಳು ನಿರ್ಧಿಷ್ಟವಾಗಿರಬಹುದು (precomposed/definite) ಅಥವಾ ಪದ ಹೇಳುವಾಗ ಸೃಷ್ಟಿಯಾಗುವ ಛಂದೋಲಯಳಿಗೆ ಹೊಂದಿಕೊಂಡಿರಬಹುದು (improvised). ಛಂದೋಲಯ ತಾಳಕ್ಕಿಂತ ಸೂಕ್ಷ್ಮವಾದದ್ದು. ಹಿಮ್ಮೇಳದವರು ನಿರ್ಧಿಷ್ಟ ಮಟ್ಟುಗಳನ್ನು ಮೊದಲೇ ಆಭ್ಯಾಸಮಾಡಬಹುದಾದರೂ ಆಶುಮಟ್ಟುಗಳನ್ನು ಪ್ರತಿಭೆಯಿಂದಲೋ ಕೇಳಿಯೋ ರೂಢಿಸಿಕೊಳ್ಳಬೇಕಾಗುತ್ತದೆ. ಭಾಗವತಿಕೆಯ ವಿಶೇಷವೆಂದರೆ ಈ ಮಟ್ಟುಗಳು ಪದಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ. ಪದ ಹೇಳುವಾಗ ಸ್ವರವಿನ್ಯಾಸ ಮಾಡಲುಹೋಗಿ ಛಂದೋಲಯ ಹಾಳುಮಾಡದೇ ಇರುವುದೇ ಇದಕ್ಕೆ ಮುಖ್ಯಕಾರಣ ಎನ್ನುವುದು ನನ್ನ ಅನಿಸಿಕೆ. ಹಿಂದೂಸ್ತಾನಿಯಲ್ಲಿ ಈ ಛಂದೋಲಯ ಅತಿ ಗೌಣ. ಕರ್ನಾಟಕಿಯಲ್ಲಿ ಛಂದೋಲಯ ಗೌಣವಲ್ಲ ಆದರೆ ಸ್ವರವಿನ್ಯಾಸಕ್ಕೆ ಪ್ರಾಶಸ್ತ್ಯ ಹೆಚ್ಚಾಗಿ ತಾಳವಾದ್ಯಗಳಲ್ಲಿ ಈ ಲಯ ಕಾಣಿಸಿದರೂ ಹಾಡಿನಲ್ಲಿ ಕಾಣಿಸುವುದು ಕಡಿಮೆ. ಆದ್ದರಿಂದಲೇ ಕರ್ನಾಟಕಿಯಲ್ಲಿ ತಾಳವಾದ್ಯಗಳು ಮತ್ತು ಹಾಡುಗಳಲ್ಲಿನ ಛಂದೋಲಯ ಸ್ವಲ್ಪ ಬೇರೆ ಬೇರೆಯಾಗಿ ಕಾಣುತ್ತವೆ.

ಯಕ್ಷಗಾನದಲ್ಲಿ ತಾಳ ಮತ್ತು ಛಂದೋಲಯಗಳ ಮಿಶ್ರಣವಿದ್ದರೆ, ಗಮಕವಾಚನದಲ್ಲಿ ಈ ಛಂದೋಲಯವೇ ಮುಖ್ಯ. ಅಲ್ಲಿ ತಾಳಕ್ಕೆ ಪ್ರಾಶಸ್ತ್ಯವೇ ಇಲ್ಲ. ಗಮಕಿ ಕೆರೆಕೊಪ್ಪದ ನರಹರಿ ಶರ್ಮರು ಹೇಳುವಂತೆ ಗಮಕವಾಚನ ಸಾಹಿತ್ಯ ಪ್ರಧಾನವಾದದ್ದು. ಕೆಲವು ಪದ್ಯಗಳನ್ನ ಅದರ ಭಾವಕ್ಕೆ ತಕ್ಕುದಾದ ಗತಿಯಲ್ಲಿ ಹಾಡಬೇಕು. ಇಲ್ಲಿ ಛಂದಸ್ಸು ಸಾಹಿತ್ಯದ ಭಾಗ ಎಂಬುದನ್ನ ಗಮನಿಸಿ. ಸ್ವರವಿನ್ಯಾಸಮಾಡಲು ಹೋಗಿ ಪದ್ಯದಭಾವಕ್ಕೋ ಅರ್ಥಕ್ಕೋ ಕುಂದಾಗಬಾರದೆಂಬುದೂ ಅವರ ಕಳಕಳಿ ಎಂಬುದು ನನ್ನ ಅಭಿಪ್ರಾಯ. ಕಾವ್ಯವಾಚನ ಬಿಟ್ಟರೆ ಬಯಲಾಟದಲ್ಲೆ ಸಾಹಿತ್ಯಕ್ಕೆ ಮತ್ತು ಛಂದೋಲಯಕ್ಕೆ ಪ್ರಾಧಾನ್ಯತೆ ಹೆಚ್ಚು. ಅದ್ದರಿಂದ ಗಮಕದ ಕೆಲವು ನಿಯಮಗಳು ಬಯಲಾಟದ ಭಾಗವತಿಕೆಗೂ ಅನ್ವಯಿಸುತ್ತದೆ. ಸ್ವರವಿನ್ಯಾಸ ಕಡಿಮೆಯಾದರೆ ಸಾಹಿತ್ಯಕ್ಕೆ, ಛಂದೋಲಯಕ್ಕೆ ಮತ್ತು ತನ್ಮೂಲಕ ಉಂಟಾಗುವ ಮಟ್ಟುಗಳಿಗೆ  ಒತ್ತು ದೊರೆಯುತ್ತದೆ. ಇವು ನಮಗೆ ಶಾಸ್ತ್ರೀಯ ಎನಿಸಿಕೊಂಡ ಸಂಗೀತಗಳಲ್ಲಿ ದೊರಕುವುದಿಲ್ಲ. 

ಒಂದನ್ನು ಬಿಟ್ಟು ಇನ್ನೊಂದನ್ನು ಆರಿಸಿಕೊಂಡು ಕಲೆಗಳು ತಮ್ಮದೇ ಆದ ಸ್ಥಾನವನ್ನು ಸೃಷ್ಟಿಸಿಕೊಳ್ಳುತ್ತವೆ. ಅದರ ಪರಿಣಾಮವೋ ಎಂಬಂತೆ ಕಲೆಯ ಸ್ವರೂಪ ಬದಲಾಗಿ ಬೆಳವಣಿಗೆಯ ದಾರಿ ಬೇರೆಯಾಗಿ ವೈವಿಧ್ಯತೆ ವಿಸ್ತಾರವಾಗುತ್ತದೆ. ಇವೆಲ್ಲವೂ ನಮಗೆ ಬೇಕು. ಕಲೆ ಹಿಡಿದ ದಾರಿ ಹೇಗಿದೆ ಅದರ ಸಾಮಾಜಿಕ ಸ್ಥಾನ ಹೇಗಿದೆ, ಬೆಂಬಲ ಹೇಗಿದೆ ಎನ್ನುವುದನ್ನು ಅವಲಂಬಿಸಿ ಬೆಳವಣಿಗೆಯ ಹಂತ ಬೇರೆ ಬೇರೆ ಆಗುತ್ತದೆ. ಆದರೆ ನಮಗೆ ಒಂದು ಕಲೆ ಹೆಚ್ಚಾಗಿ ಇನ್ನೊಂದು ಕಡಿಮೆಯಾಗಬೇಕಿಲ್ಲ. ಕಲೆಗಳ ಒಲವು, ಪ್ರಾಶಸ್ತ್ಯ ಮತ್ತು ಉದ್ಧೇಶ ಎಲ್ಲವೂ ಬೇರೆ ಬೇರೆ. ಕಲೆಗಳನ್ನು ತುಲನೆ ಮಾಡುವಾಗ ಇವೆಲ್ಲವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುವುದು ನನ್ನ ಅಭಿಪ್ರಾಯ. 

(ವಿ ಸೂ: ಇಲ್ಲಿ ಸಂಗೀತವನ್ನು ಸಣ್ಣದುಮಾಡುವುದು ನನ್ನ ಉದ್ದೇಶವಲ್ಲ. ಸಂಗೀತವನ್ನು ದೊಡ್ಡದುಮಾಡಿ ಇತರೆ ಕಲೆಗಳನ್ನು ಅವಹೇಳನ ಮಾಡುವ ವಂದಿಮಾಗಧರ ಹಿಂಡೇ ಇರುವುದರಿಂದ ನನ್ನ ವಿವರಣೆಗಳನ್ನು ಯಕ್ಷಗಾನಕ್ಕೆ ಮಾತ್ರ ಸೀಮಿತಗೊಳಿಸಿದ್ದೇನೆ. ನನಗೆ ಸ್ವರ ಸರಿಯಾಗಿ ತಿಳಿಯುವುದಿಲ್ಲ ಆದರೆ ಕೆಲವು ಸಣ್ಣ ಸ್ವರವಿನ್ಯಾಸಗಳನ್ನು ಧಾಟಿಯ ಆದಾರದ ಮೇಲೆ ಸ್ವಲ್ಪ ಗುರುತಿಸಬಲ್ಲೆ. ಸಂಗೀತದಲ್ಲಿರುವಷ್ಟು ಶಿಸ್ತು ಅಥವಾ ಸಂಗೀತಗಾರರ ಪರಿಶ್ರಮ ಭಾಗವತಿಕೆಯಲ್ಲಿ ಇಲ್ಲ ಎನ್ನುವುದೂ ನಿಜವೆ. ಅದು ಕಲಿಯಬೇಕಾದ್ದೆ)

*ಬೇರೆ ಮತಿ ಬೇರೆ ಮತ ಮಂಕುತಿಮ್ಮ - ಗುಂಡಪ್ಪ 

19 September 2011

ಚೌತಿ ಹಬ್ಬ - ನಮ್ಮೋರ - ನಮ್ಮೂರ ಆಚರಣೆಗಳು

ಎಲ್ಲರಿಗೂ ಆಶ್ಚರ್ಯ ಆಗುವ ರೀತಿಯಲ್ಲಿ ಒ೦ದು ಲೇಖನ ಪ್ರಕಟಗೊ೦ಡಿತ್ತು. ಅದರ ಪ್ರಕಾರ ಪೇಟೆಗಳಲ್ಲಿ ದೇವರಮೇಲಿನ ಭಕ್ತಿ ಹಳ್ಳಿಗಿ೦ತ ಹೆಚ್ಚು! ಅದೇನೆ ಇದ್ದರೂ, ಹಳ್ಳಿಗಳಲ್ಲಿ ಇ೦ದಿಗೂ ಹಬ್ಬದ ಸಡಗರ, ಚಟುವಟಿಕೆ ಹೆಚ್ಚು. ಅ ಆಚರಣೆ, ಚಟುವಟಿಕೆಗಳಲ್ಲಿ ಶಿಕ್ಷಣ, ಸ೦ಪ್ರದಾಯ, ಸ್ವಾರಸ್ಯ ನಾವು ಅ೦ದುಕೊ೦ಡಿದ್ದಕ್ಕಿ೦ತ ಹೇಚ್ಚೇ ಇದೆಯೋ ಅನ್ನಿಸುತ್ತದೆ. ನಮ್ಮೂರಿನಲ್ಲಿ ನಾನು ಸಣ್ಣಕಿದ್ದಾಗ ಚೌತಿ ಹಬ್ಬ ಹೇಗಿತ್ತು, ಅದರಿ೦ದ ನಾನು ಏನೇನು ಕಲಿತೆ ಅದರ ಸ್ವಾರಸ್ಯ ಏನು ಎ೦ದು ನೆನಪಿಸಿಕೊ೦ಡು ಹೇಳುತ್ತಾ ಹೋಗುತ್ತೇನೆ. 

"ಮಾಣಿ ಎದ್ಯನಾ? ಗಣಪತಿ ತರವು ಸಾನ ಮಾಡ್ಕ್ಯ೦ಡು ಬಾರ, ಎ೦ಗಿನ್ನು ಎಷ್ಟು ಕೆಲಸಿದ್ದು ಇನ್ನೂ ಪ೦ಚ್ಗಿಜ್ಯಕ್ಕೆ ಬೆಲ್ಲ ಕಾಸ್ಯಾಗಲ್ಲೆ, ಏಳ! ಹೂ ಕೊಯ್ಯಿ ನಡಿ" ಹೀಗೆ ಅಮ್ಮನ ಆಜ್ಞೆ! "ಕೌಸಲ್ಯಾ ಸುಪ್ರಜಾರಾಮ" ಸುಪ್ರಭಾತದ ಅಮ್ಮನ ವರಸೆ. ಹಬ್ಬ ಶುರುವಾಗುವುದು ನಾನು ಎದ್ದ ಮೇಲಲ್ಲ, ಹಬ್ಬದ ದಿನವೂ ಅಲ್ಲ, ಹಬ್ಬಕ್ಕಿಂತ ಒಂದೆರಡುದಿನ ಮೊದಲೇ. ಅಲ್ಲಿ ಸೊನೆಗಾರ ಮೋಹಿನಿಯ ಗಂಡ ಜೇಡಿಮಣ್ಣಿನ ರವೆ ಉಂಡೆ ಮಾಡಿ ಅದಕ್ಕೆ ಗಣಪತಿ ರೂಪ ಕೊಡುವುದು ತಿಂಗಳುಗಟ್ಟಲೆ ಮೊದಲು. ಪುರ ನಮ್ಮೂರಿಂದ ಒಂದರ್ಧತಾಸಿನ ಹಾದಿ.ಅಲ್ಲಿ ಸೊನೆಗಾರರವನಿಗೆ ಗಣಪತಿಮಾಡಲು ವರ್ಷಾವರ್ಷ ಹೇಳುವುದೇನು ಬ್ಯಾಡ. ಹಬ್ಬಕ್ಕೆ ನಾಲ್ಕುದಿನ ಮೊದಲೇ ಗಣಪತಿ ಮನೆಗೇ ಬರುತ್ತದೆ. ಗಣಪತಿ ಜೊತೆಗೆ ಮಾಡಿ ತಂದವರಿಗೂ ಅಕ್ಕಿಕಾಯಿ ದಕ್ಷಿಣೆ. ಊನವಾಗದಂತೆ ನಮ್ಮಂತ ಪಿಳ್ಳೆಕಾಕರಿಂದ ತೊಂದರೆ ಆಗದಂತೆ ಗಣಪತಿಗೆ ಸುರಕ್ಷಿತವಾಗಿ ಜಗುಲಿ ಕಪಾಟಿನಲ್ಲಿ ತಪಸ್ಸು ಮಾಡಲು ವ್ಯವಸ್ಥೆ!   ಹಬ್ಬದದಿನ ಈ ಅಮ್ಮನ ಸುಪ್ರಭಾತ ಗಣಪತಿತರಲಲ್ಲ, ಹೂ ಕೊಯ್ಯಲು. ಬರೀ ಹೂವಿದ್ದರೆ ಪೂಜೆ ಸಾಧ್ಯವೇ? "ಸಕ್ಕರೆ ನೊರೆಹಾಲು ತುಪ್ಪ ಕಜ್ಜಾಯ ಬೊಕ್ಕೆ ಹಲಸು ಮಾವು ಕದಲೀ ಫಲ" ಯಕ್ಷಗಾನದ ಪದ್ಯ ಕೇಳಿಲ್ಲವೇ ? ನಮ್ಮಮನೆಯಲ್ಲಿ ಕಬ್ಬು ಹಾಕುವುದು ಬಿಟ್ಟಮೇಲೆ ಮಂಕೋಡು ಬಸಪ್ಪನವರ ಕಬ್ಬಿನಗದ್ದೆಯಿ೦ದ ನಮ್ಮನೆ ಗಣಪತಿಗೆ ಎರಡು ಕಬ್ಬು, ತರಲು ಹೋದವರಿಗೆ ನಾಲ್ಕು! ಅಲ್ಲೇ ನಮ್ಮನೆ ತಳೇಬೈಲು ಹೊಸತೋಟದಿಂದ ಎರಡು ಎಳೆ ಬಾಳೆಗಿಡ, ನಾಲ್ಕು ಚಿಪ್ಪು ಬಾಳೆಹಣ್ಣು ಮತ್ತ ಊಟಕ್ಕೆ ಒಂದೈವತ್ತು ಕುಡಿಬಾಳೆ ಇವೆಲ್ಲ ಹಿಂದಿನದಿನವೇ ಬರಬೇಕು. ಹಿಂದಿನ ದಿನ ರಾತ್ರಿ ಮನೆಗೆ ಬಂದಾಗ ನಾವೇ ತಂದೆವೆಂಬ ಬಿಗುಮಾನ ಚೋಟು ಮೆಣಸಿನಕಾಯಿ ನನಗೆ, ತರುವವರೋ ದೊಡ್ಡವರು.

ನಮ್ಮೂರಲ್ಲಿ ಕರೆಂಟ್ ಇಲ್ಲದಿದ್ದಿರಬಹುದು ಆದರೆ ಬ್ಯಾಟರಿ ಸೆಲ್ ಇರಲಿಲ್ಲವೇ ? ಇತ್ತು, ಸೆಲ್ ಹೊಟ್ಟೆಗೆ ತುಂಬಿಕೊಂಡು, ಮಲಗಿಕೊ೦ಡೇ ಹಾಡುವ ಟೆಪ್ ರೆಕಾರ್ಡರ್ ಕೂಡ ಇತ್ತು. ಆದರೆ ಅದನ್ನು ಹಬ್ಬದ ದಿನ ಕೂಗಿಸುವ ವ್ಯವಧಾನ ಯಾರಿಗೂ ಇರುತ್ತಿರಲಿಲ್ಲ. ಫಿಲಿಪ್ಸ್ ರೇಡಿಯೋ ಮಾತ್ರ ಯಾವುದರ ಪರಿವೆಯಿಲ್ಲದೇ ೬.೫೫ ಕ್ಕೆ "ಇಯಂ ಆಕಾಶವಾಣಿ ಸಂಪ್ರತಿ ವಾರ್ತಾಂ ಶೃಯಂತಾಂ" ಎನ್ನುತಿದ್ದರೆ ತ್ವಾರಣ (ತೋರಣ) ಮಾಡುವರ್ಯಾರು ? ನಾವೇ, ಹನೂಮಾಂಶಸಂಭೂತರು! ಹೌದು ಮಾವಿನ ಮರಹತ್ತಿ ಮಾವಿನ ಕೊನಕಲು (ಚಂಡೆ) ಮುರಿದು ಸೊಣಬಿನಾರಿಗೆ ಎಲೆಮಡುಚಿ ಕಟ್ಟಿ ತೋರಣ ತಯಾರು ಮಾಡುವುದರಿಂದ ಅಫಿಸಿಯಲೀ ಹಬ್ಬ ಸುರು.
ನಿನ್ನೆ ತಂದ ಬಾಳೆಗಿಡ, ಕಬ್ಬಿನ ಗಿಡ ಎಲ್ಲಿ? ತಂದು, ಉಂಡು ಮಲಗಿ, ಈಗ ತೋರಣ ಕಟ್ಟಲಷ್ಟೇ ಏಳುವುದಾದರೆ ಕಷ್ಟವಲ್ಲ. ಆದರೆ ಮಧ್ಯರಾತ್ರಿವರೆಗೂ ಜಾಗರಣೆ ಆಗದಿದ್ದರೆ ಹಬ್ಬದದಿನ ಬೆಳಿಗ್ಗೆ ಏಳಿಸುವ ಪ್ರಮೇಯ ಇರುವುದಿಲ್ಲ. ಗಣಪತಿಗೆ ಮಂಟಪ ಕಟ್ಟದಿದ್ದರೆ ಹಬ್ಬ ಎಂತ ಮಣ್ಣು? ಯಾವಯಾವ ಬಣ್ಣದ ಸುನೇರಿ ಕಾಗದ ಬೇಕು ಏನ್ತಾನು ಎಲ್ಲ ಜೋಯ್ಸಣ್ಣಂಗೆ ಗೊತ್ತು. ಅವನೇ ಎಲ್ಲಪಟ್ಟಿ ಕೊಟ್ಟು ಹಬ್ಬದ ಸಂತೆ ದಿನವೇ ಸುನೇರಿ ಕಾಗದ, ಬಣ್ಣದಕಾಗದ ಇತ್ಯಾದಿ ಮನೆ ಬಂದಾಗಿರುತ್ತದೆ. ಎರಡು ಸಣ್ಣ ಅಡಿಕೆ ಎಳೆಯೋ ಅಥವಾ ಕೆತ್ತಿದ ದಬ್ಬೆಯೋ ತಯಾರು ಮಾಡಿದರೆ ಜೋಯಿಸಣ್ಣನ ಕೆಲಸ ಶುರು. ಮಂಟಪದ ಆರ್ಕಿಚಿಟೆಕ್ಟು ಜೋಯಿಸಣ್ಣ ಬರುತ್ತಿದ್ದಂತೇ ಕತ್ತರಿ ಮೈದಾಹಿಟ್ಟಿನ ಅಂಟು ಎಲ್ಲ ತಂದುಕೊಡುವ ಕೆಲಸ ಅಮ್ಮನದು. ಕತ್ತರಿ ಸಿಗದಲ್ಲಿಟ್ಟು ಬಯಿಸಿಕೊಳ್ಳುವುದು ನನ್ನ ಕೆಲಸ! ನಾನು ಜೋಯಿಸಣ್ಣನ ಅಸಿಸ್ಟೆಂಟು. ಸುಮಾರು ರಾತ್ರಿ ಒಂದು ಒಂದುವರೆಗೆ ಮಂಟಪ ತಯಾರು. ಗಣಪತಿಕೂರಿಸಲೆಂದೇ ಅಜ್ಜನಕಾಲದಿಂದ ಇದ್ದ ಒಂದು ಪೀಠಕ್ಕೆ ಬಣ್ಣಹಚ್ಚಿಸಿಕೊಳ್ಳುವ ಕ್ಷಣಿಕ ಸೌಭಾಗ್ಯ. ನಾಳೆ ಬೆಳಗಾದರೆ ಮೇಲ್ಮೆತ್ತು ಸೇರುವ ಈ ಸಣ್ಣಕುರ್ಚಿಗೆ ಮಧ್ಯರಾತ್ರಿ ಶೃಂಗಾರ ನೆಡೆಯುತ್ತಿತ್ತು. ಜೋಯಿಸಣ್ಣ ಮನೆಗೆ ಹೋಗುವವರೆಗೂ ಬ್ಯಾಟರಿ ಹೊಡೆದು ಹಾಸಿಗೆ ಮೇಲೆ ದುಪ್ಪನೆ ಬಿದ್ದ ಬಡಪಾಯಿಗೆ ಬೆಳಗಾಗುವುದರೊಳಗೆ ಅಮ್ಮನ ಸುಪ್ರಭಾತ. ಆಹಾ ಎಂತಾ ಸೊಗಸು, ಸ್ವಂತ ಸುಬ್ಬುಲಕ್ಷ್ಮಿಹಾಡಿದರು ಅಂತಹ ಆನಂದ ಸಿಕ್ಕುವುದಿಲ್ಲ ನೋಡಿ. ನಾನು ಸೇಡು ತೀರಿಸಿಕೊಳ್ಳದೇ ಬಿಟ್ಟವನಲ್ಲ. "ವರಗಳ ಕೋಡುಮಾತೆ ಕಂಚಿ ನಾರಾಣ ಸುತೇsssss ವರಗಳ ಕೊಡು ಮಾತೆ" (ಕಂಚಿ ನಾರಾಣ ಅಮ್ಮನ ಅಪ್ಪ, ನನ್ನ ಅಜ್ಜ!) ಎಂದು ಜಾನಪದಗೀತೆಯನ್ನೂ ಹಾಳುಮಾಡಿ ಅಮ್ಮನನ್ನೂ ರೇಗಿಸಿ ಓಡಿಹೋಗುತ್ತಿದ್ದುದುಂಟು.

ತೋರಣ ಒಂದೇ ಎರಡೆ? ಮೂರೇ ನಾಲ್ಕೆ? ಐದೇ ಆರೇ? ಸಾಕು ಸಾಕು ಎಂದು ಅಜ್ಜ ಹೇಳುವವರೆಗೂ ತೋರಣ ಮಾಡುವುದೇ ಮಾಡುವುದು. ಕೊಟ್ಟಿಗೆಗೆ ಎರಡು, ಹೊರಬಾಗಿಲಿಗೆ ಒಂದು, ಪ್ರಧಾನ ಬಾಗಿಲಿಗೆ ಒಂದು, ವಾಸ್ತು ಕಂಬಕ್ಕೆ ಒಂದು ಗಣಪತಿ ಮಂಟಪಕ್ಕೆ ಒಂದು. ಹಳೇ ಮನೆ ದೇವರಿಗೆ ಒಂದು. ದೀಪಾವಳಿ ಅಲ್ಲ ಬಚಾವ್! ಅದಕ್ಕೆ ಹಂಡ್ಯ, ಬಾವಿ ಬಂಕಕ್ಕೂ ಮಂಗನ ಬಳ್ಳಿ, ಕಾರೇ ಮುಳ್ಳು ಏನೇನೋ ಬೇಕು.  ಅಪ್ಪ ದೇವರಗೂಡಿನ ಎದುರಿಗೆ ಹೊಡೆದ ಗಳಕ್ಕೆ (ರೀಪು) ಸಾಲಾಗಿ ಹಣ್ಣು ತರಕಾರಿ ನೇತುಹಾಕಿ ಆಗಿರುತ್ತಿತ್ತು. ಮುಳ್ಳು ಸೌತೆ, ಮಗೆ ಸೌತೆ, ಸೇಬು, ಕಿತ್ತಲೆ, ಹಿರಿಯಪ್ಪ ತಂದ ಮೂಸುಂಬಿ, ಜೋಳದ ಕುಂಡಿಗೆ, ತೆಂಗಿನಕಾಯಿ, ಬಾಳೆಹಣ್ಣು, ಹೀಗೆ ಮನೆಯಲ್ಲಿ ಬೆಳೆದ, ತಂದ ತರಕಾರಿ ಹಣ್ಣು ಹಂಪಲು ಇತ್ಯಾದಿ. ಇದಕ್ಕೆ ಪಲೋಳ್ಗೆ ಕಟ್ಟುವುದು ಅಂತ ಹೆಸರು (ಫಲಾವಳಿಗೆ). ಅಪ್ಪನಜೊತೆ ಪಲೋಳ್ಗೆ ಕಟ್ಟಿ ತೋರಣ ಕೈಗೆ ಸಿಕ್ಕಲ್ಲೆಲ್ಲಾ ಕಟ್ಟಿ ಬಿಗಿದು ಹೂ ಕೊಯ್ಯಲು ಭಟ ರೆಡಿ.

ಹೂ ಕೊಯ್ಯುವುದರಲ್ಲೇನು ವಿಶೇಷ? ಹೂ ಕೊಯ್ಯದಿದ್ದರೆ ನನಗೆ ಇಪ್ಪತ್ತೈದು ಜಾತಿ ಹೂವಿನ ಹೆಸರು ಎಲ್ಲಿ ಗೊತ್ತಿರುತಿತ್ತು! ಅದರಲ್ಲು ಆ ಆ ಕಾಲಕ್ಕೆ ಋತುಗಳಿಗೆ ಬಿಡುವ ಹೂಗಳು. ಗಣಪತಿ ಹಬ್ಬಕ್ಕೆ ವಿಶೇಷ ಕಳ್ಳಹೂ ಮತ್ತು ವಿಷ್ಣುಕಾಂತಿ. ಬೆಳಗ್ಗೆ ಮುಂಚೆ ಒಳ್ಳೆ ಇಬ್ಬನಿ, ತೆಳ್ಳಗೆ ಚಳಿ ಇರುವಾಗ ಬ್ಯಾಣಗಳಲ್ಲಿ (ಹುಲ್ಲುಗಾವಲು) ಸ್ವಲ್ಪ ಜಂಬಿಟ್ಟಿಗೆ (ಚೀರೆ) ಕಲ್ಲು ಇರುವಕಡೆ ಹುಡುಕುತ್ತ ಹೋಗಬೇಕು. ಕಡು ನೇರಳೆ ಕೆಂಪಿನ, ಬಟ್ಟಲು ಆಕೃತಿಯ ಹೂವು: ಕಳ್ಳಹೂ. ಅದರ ಹೆಸರು ಯಾಕೆ ಹಾಗೆ ಬಂತೂ ಗಣಪತಿಯನ್ನೇ ಕೇಳಬೇಕು!  ವಿಷ್ಣುಕಾಂತಿಗೆ ಹೆಸರು ಹೇಗೆಬಂತು ಎನ್ನುವುದು ಅದನ್ನು ಹುಡುಕಲು ಕಲಿತಮೇಲೆ ಕೇಳೋಣ. ಆ ಹುಲ್ಲಿನ ಸಂದಿಯಲ್ಲಿ  ವಿಷ್ಣುಕಾಂತಿಯನ್ನು ಹುಡುಕುವುದೇ ದೊಡ್ಡ ತಾಪತ್ರಯದ ಕೆಲಸ! ಸಣ್ಣ ಬಳ್ಳಿಯ ರೀತಿ ಇರುವ "ಹೂ" ಹೂವೇ ಅಲ್ಲ. ಅದು ಬಳ್ಳಿಯೇ. ತುಳಸಿ ಹೂವೇ? ಹಾಗೇ ಇದು. ಇಡೀ ಬಳ್ಳಿಗೆ ಬಳ್ಳಿಯೇ ಪೊಜೆಯ ಬಳಕೆಗೆ ಅರ್ಹ. ದೂರ್ವೆ ತುಳಸಿ ಸಹಸ್ರನಾಮ ಪೂಜೆಗೆ ಬೇಕಾಗುವಷ್ಟು ಕೊಯ್ದರೆ ಆಯಿತು. ಇನ್ನೇನು ಹೂಕೊಯ್ಯುವುದು ಮುಗಿದೇ ಹೋಯಿತು. ಹೌದು ಉಳಿದ ಮಲ್ಲಿಗೆ, ಕರವೇರು (ಕರವೀರ), ಗ್ವಾಟಲೆ, ತುಂಬೆ, ಕಲ್ತುಂಬೆ, ಕಣಗಲು, ನಂಜುಗ್ವಾಟಲೆ, ಶಂಖಪುಷ್ಫ, ದಾಸವಾಳ, ಇನ್ನೇನೋ ಹೆಸರುಮರೆತು ಹೋಗಿರುವ ಹೂವೆಲ್ಲಾ  ಕೊಯ್ದಾದರೆ ಮುಗಿದಂತೇ ಕಥೆ!! ಇನ್ನೂ ಪಟಾಕಿ ಬಿಸಿ ಆಗಿದೆಯೋ ಇಲ್ಲವೋ ಗೊತ್ತಿಲ್ಲ. ಬಚ್ಚಲುಮನೆ ಒಲೆ ಮೇಲೆ ನಿನ್ನೆಯೇ ಇಟ್ಟಾಗಿದೆ! ಗಣಪತಿ ಯಾರಿಗೆ ಯಾವ ವರ ಕೊಡದಿದ್ದರೂ ಅಡ್ಡಿಯಿಲ್ಲ, ನನ್ನ ಪಟಾಕಿ ಟುಸ್ ಅನ್ನದಿದ್ದಂತೆ ಮಾಡಿದರೆ ಸಾಕು. ಇಲ್ಲದಿದ್ದರೆ ಗಣಪತಿಗೆ ಪಿಚ್ಚಹೂವು, ಹೂಸುಗಬ್ಬೇ ಗತಿ! ವೀಳ್ಯದೆಲೆ ಕೊಯ್ಯುವುದು ಸೋಸುವುದು, ತಬಕಿಗೆ ಎಲೆ ಅಡಿಕೆ ಕೊಬ್ಬರಿ ಅಡ್ಡಗತ್ತರಿ ಹಾಕಿಡುವುದು, ಸುಣ್ಣಕ್ಕೆ ನೀರು, ಇವೆಲ್ಲ ಜೋಯ್ಸಣ್ಣ ಇದ್ದರೆ ಅವನದೇ ಇಲ್ಲದಿದ್ದರೆ ನಾನು ಮಾಡಬೇಕು.

ಕೆಲವು ಊರಲ್ಲಿ ಇಲಿ ಪಂಚಮಿ ಆಚರಿಸುತ್ತಾರಂತೆ. ಇಲಿಗೆ, ಅಪ್ಪಾ ನಮ್ಮ ಗದ್ದೆ, ಹೊಮ್ಮಂಡ ತಿಂದು ಹಾಳುಮಾಡಬೇಡಪ್ಪಾ ಎಂದು ಬೇಡಿ ರೈತರು ಹಬ್ಬದ ತಿನಿಸನ್ನು ಇಲಿದರ (ಇಲಿದ್ವಾರ) ಇದ್ದಲ್ಲಿ ಹೋಗಿ ಇಟ್ಟು ಬರುತ್ತಾರಂತೆ. ಇಲಿ ಗಣಪನ ವಾಹನವಲ್ಲವೇ? ಎಂತಹಾ ಸಂಬಂಧ ನೋಡಿ. ಈ ಮುಗ್ಧತೆ ನಮ್ಮಿಂದ ದೂರವಾಗದಿದ್ದರೆ ಎಷ್ಟು ಚಂದ ಅನಿಸುತ್ತದೆ ಒಮ್ಮೊಮ್ಮೆ.

ಬಳಪದ ಕಡ್ಡಿಯಲ್ಲಿ ಬರೆದರೆ ಪಾಟಿ ಅಳಿಸಲು ಸುಲಭ. ಬೆಣ್ಣೆ ಕಡ್ಡಿಯಲ್ಲಿ  ಬರೆದರೆ ಅಳಿಸಲು ನೀರೋ ಅಥವಾ ಗೌರಿ ದಂಟೋ ಬೇಕು! ಗೌರಿ ಪೂಜೆಯ ನೆನಪಿಗೋ ಎನ್ನುವಂತೆ ಅದೇಸಮಯಕ್ಕೆ ಹಾದಿ ಅಕ್ಕಪಕ್ಕ ಬೆಳೆಯುವ ಹೂವಿಗೆ ಗೌರಿಹೂ ಎಂದುಕರೆಯುವುದು. ಪೂಜೆಗೆಬಳಸುವುದೂ ಇದೆ. ನಮಗೆ ಹುಡುಗರಿಗೋ ಗೌರಿದಂಟು ಪಾಟಿ ಅಳಿಸಲು ಸಾಕು. ಹಬ್ಬದದಿನ ಪಾಟಿಯೂ ಬೇಡ ಕಡ್ಡಿಯೂ ಬೇಡ. ಅವಕ್ಕೆಲ್ಲ ನಮ್ಮಂತೆ ರಜಾ. ಗೌರಿ ಹಬ್ಬ ಗಣಪತಿ ಹಬ್ಬದ ಹಿಂದಿನ ದಿನ. ಗೌರಿ ಹಬ್ಬವನ್ನು ಕೆಲವು ಜಾತಿಯವರು ಮಾತ್ರ ಆಚರಿಸುತ್ತಾರೆ.

ಇಷ್ಟೆಲ್ಲಾ ಓದಿ ನಿಮಗೂ ಹಸಿವಾಗಿರಬಹುದು. ಆದರೆ ನೋಡಿ ಇಷ್ಟು ಹೂ ಕೊಯ್ದ ನನಗೆ ಕಡುಬು ತಿನ್ನಲು ಬಿಡುವುದು ಗಣಪತಿಗೆ ನೈವೇದ್ಯ ಆದಮೇಲೇ. ಮುಸರೆ, ಅನ್ನ ಅದು ಇದು ತಿನ್ನುವಂತಿಲ್ಲ. ಇವತ್ತು ಚೌತಿ ಹಬ್ಬ! ಏನೋ ನಾಲ್ಕು ಅಳಕಾಳು (ಅರಳು ಕಾಳು) ನಲವತ್ತು ಬಾರಿ ತಿಂದು ನೈವೇದ್ಯವಾಗುವವರೆಗೂ ಕಾಯಬೇಕು.  ನಾಳೆ ನಾಡಿದ್ದು ಅಡ್ಡಿಯಿಲ್ಲ. ನಾಡಿದ್ದು ಹಬ್ಬದ ಇಲಾಡಿ (ರಜಾ). ಇಲಾಡಿದಿನ ಯಾರೂ ಕೆಲಸಕ್ಕೆ ಹೋಗುವುದಿಲ್ಲ. ಹಬ್ಬದಮರುದಿನ ನೆಂಟರು ಆಳಿಯಂದಿರು ಬಂದು ಹೋಗುವದಿನ. ಗಣಪತಿಯ ನೈವೇದ್ಯದ ನೆಪದಲ್ಲಿ ಮಾಡಿದ್ದೆಲ್ಲಾ ಮುಕ್ಕಬಹುದು!

ಯಕ್ಷಮಿತ್ರದಿಂದ ಹೊಸ್ತೋಟ ಭಾಗವತರ ಯಕ್ಷಗಾನ ಲಕ್ಷಣ ಗ್ರಂಥ ಪ್ರಕಟಣೆ

                      ಪುಸ್ತಕಕ್ಕಾಗಿ ಸಂಪರ್ಕಿಸಿ ಅಮೇರಿಕಾಸ್: +16473283934                        ಭಾರತ — ರವೀಂದ್ರ ಮುದ್ರಣಾಲಯ ಸಾಗರ, ಮೋ: +9194495872...